ಆಳಂದ: ಶ್ರಾವಣ ಮಾಸವೆಂದರೆ ಕೇವಲ ಧಾರ್ಮಿಕ ಆಚರಣೆಗಷ್ಟೇ ಅಲ್ಲ, ಅದು ಒಳಗಿನ ಶುದ್ಧತೆ, ನಿಸ್ವಾರ್ಥ ಸೇವೆ, ಶ್ರದ್ಧಾ-ಭಕ್ತಿಯ ಮಾಸ. ಈ ತಿಂಗಳಲ್ಲಿ ಮನಸ್ಸು ಮತ್ತು ಮನೆಯನ್ನು ಶುದ್ಧಗೊಳಿಸಬೇಕು.
ಪ್ರತಿದಿನದ ಜೀವನದಲ್ಲಿ ಶಾಂತಿ, ಸಾತ್ವಿಕತೆ ಹಾಗೂ ಲಿಂಗಸ್ಮರಣೆಯನ್ನು ನಿತ್ಯದ ಪ್ರಥಮ ಕರ್ತವ್ಯವನ್ನಾಗಿ ಮಾಡಬೇಕು. ಜಾತ್ರೆ ಅಥವಾ ಉತ್ಸವಗಳು ನೂರಾರು ಮಂದಿ ಸೇರಿ ಒಟ್ಟಾಗಿ ಒಂದು ಮಾತನ್ನು ಭಾವನಾತ್ಮಕವಾಗಿ ಅನುಭವಿಸುವ ವೇದಿಕೆ. ಇದು ನಮ್ಮ ಸಂಸ್ಕೃತಿಯ ಜೀವಾಳವಾಗಿದೆ ಎಂದು ಸ್ಥಳೀಯ ಶರಣ ಮಂಟಪದ ಶ್ರೀ ಚನ್ನಬಸವ ಪಟ್ಟದೇವರು ಹೇಳಿದರು.
ಪಟ್ಟಣದ ಶರಣನಗರದ ಶ್ರೀ ಸದ್ಗುರು ರೇವಣಸಿದ್ಧ ಶಿವಶರಣ ಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ 120ನೇ ಜಾತ್ರಾ ಮಹೋತ್ಸವ ಅಂಗವಾಗಿ ಬೆಳ್ಳಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು.
“ಭಕ್ತಿಯು ಕೇವಲ ಭಾವನೆಯಲ್ಲ; ಅದು ನಿಜ ಜೀವನ ವಿಧಾನ. ಶ್ರಾವಣ ಮಾಸದಲ್ಲಿ ಒಮ್ಮೆ ಶಾಂತ ಮನಸ್ಸಿನಿಂದ ಧ್ಯಾನ ಮಾಡಿದರೆ, ಅದು ವರ್ಷಪೂರಿತ ಶಕ್ತಿ ನೀಡುತ್ತದೆ. ಪ್ರತಿಯೊಬ್ಬರೂ ದುಶ್ಚಟಗಳಿಗೆ ದಾಸರಾಗದೇ, ಶಿಕ್ಷಣ-ಸಂಸ್ಕಾರ-ಧರ್ಮ ಮಾರ್ಗವನ್ನು ಅನುಸರಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕು,” ಎಂದು ಅವರು ಹೇಳಿದರು.
ಮಂಟಪದಲ್ಲಿ ಜುಲೈ 25ರಿಂದ ಆರಂಭಗೊಂಡ ಈ ಉತ್ಸವ ಆಗಸ್ಟ್ 24ರವರೆಗೆ ನಡೆಯಲಿದ್ದು, ನಿತ್ಯ ಇಷ್ಟಲಿಂಗ ಪೂಜೆ, ಶ್ರೀಗಳ ಪಾದಪೂಜೆ, ಶಾಸ್ತ್ರ ಪ್ರವಚನ, ಲಿಂಗ ದೀಕ್ಷೆಗಳ ಮೂಲಕ ಆತ್ಮಶುದ್ಧಿಗೆ ಮಾರ್ಗವಿಧಾನವಾಗುತ್ತಿದೆ.
ಈ ಸಪ್ತಾಹದ ಶ್ರಾವಣ ಸೋಮವಾರದಂದು ನಡೆದ ಬೆಳ್ಳಿ ಪಲ್ಲಕ್ಕಿ ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಶಿವನಾಮ ಸ್ಮರಣೆಯೊಂದಿಗೆ ಗರ್ಭಗುಡಿಗೆ ಸುತ್ತುವರಿದ ಪಲ್ಲಕ್ಕಿ ಕಾರ್ಯಕ್ರಮ ಅನನ್ಯ ಆಕರ್ಷಣೆಯಾಗಿತ್ತು.
ಈ ಸಂದರ್ಭದಲ್ಲಿ ಜಿಡಗಾ ಮಠದ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರರ ಪುರಾಣ ಪ್ರವಚನವೂ ನಡೆಯಿತು. ಮಂಟಪದ ಆವರಣದಲ್ಲಿ ಭಕ್ತರು ನಿರಂತರವಾಗಿ ಲಿಂಗಪೂಜೆ, ಧ್ಯಾನ, ಶ್ರವಣ ಮತ್ತು ಸೇವೆಯೊಂದಿಗೇ ತಮ್ಮ ದೈನಂದಿನ ಜೀವನವನ್ನು ಹಂಚಿಕೊಂಡು ಭಕ್ತಿ ಸಂಸ್ಕೃತಿಗೆ ಜೀವ ನೀಡತೊಡಗಿದ್ದಾರೆ.









