ಆಳಂದ: ಆಳಂದ ತಾಲೂಕಿನಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ, ಕೇಂದ್ರದ ತನಿಖಾ ತಂಡವು ಎರಡು ದಿನಗಳ ಕಾಲ ತಾಲೂಕಿನ ಹಲವು ಗ್ರಾಮಗಳಲ್ಲಿ ಪರಿಶೀಲನೆ ನಡೆಸಿತು.
ತಾಲೂಕಿನಲ್ಲಿ ಕೈಗೊಂಡಿದ್ದ 426 ತೆರೆದ ಬಾವಿಗಳ ಕಾಮಗಾರಿಯಲ್ಲಿ ಕಾರ್ಮಿಕರನ್ನು ಬಳಸದೇ ಯಂತ್ರಗಳನ್ನು ಬಳಸಿ ಕಾಮಗಾರಿ ನಡೆಸಲಾಗಿದೆ. ಜೊತೆಗೆ ಕಾರ್ಮಿಕರಲ್ಲದವರ ಹೆಸರಿನಲ್ಲಿ ಎನ್ಎಂಆರ್ ತೆಗೆದು ಹಣ ಲೂಟಿ ಮಾಡಲಾಗಿದೆ. ಸತ್ತವರ ಹೆಸರಿನ ಮೇಲೂ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ ಎಂಬ ಗಂಭೀರ ಆರೋಪಗಳನ್ನು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರಿಗೆ ಸಲ್ಲಿಸಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತನಿಖಾ ತಂಡವು ಕಡಗಂಚಿ, ಧರ್ಮವಾಡಿ, ಜಿಡಗಾ, ದೇಗಾಂವ, ನಸೀರವಾಡಿ ಮತ್ತು ಹಾಳ ತಡಕಲ ಗ್ರಾಮಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮತ್ತು ಮಾಹಿತಿ ಸಂಗ್ರಹಣೆ ನಡೆಸಿತು.
ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಾರ್ಮಿಕರನ್ನು ಬಳಸದೇ ಯಂತ್ರಗಳ ಮೂಲಕ ಕೆಲಸ ಮಾಡಲಾಗುತ್ತಿದೆ. ಗ್ರಾಮದಲ್ಲಿ ವಾಸವಾಗಿರದವರ ಹೆಸರು, ವಿದ್ಯಾರ್ಥಿಗಳ ಹೆಸರು, ಅರೆ ಸರ್ಕಾರಿ ನೌಕರರು, ಹೊರ ರಾಜ್ಯ ಹಾಗೂ ವಿದೇಶದಲ್ಲಿ ವಾಸವಾಗಿರುವವರ ಹೆಸರನ್ನೂ ಹಾಜರಿಯಲ್ಲಿ ಸೇರಿಸಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ. ಅಲ್ಲದೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಹೊಲಗಳಲ್ಲಿ ಮಾತ್ರ ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಕಾಮಗಾರಿಗಳನ್ನು ಕೇವಲ ಕಾಗದದಲ್ಲಿ ತೋರಿಸಿ, ಹಣವನ್ನು ದುರುಪಯೋಗ ಮಾಡಲಾಗಿದೆ. ಇಂತಹ ಭ್ರಷ್ಟಾಚಾರವನ್ನು ತಡೆಯಲು ಯೋಜನೆಯಡಿ ಸಾರ್ವಜನಿಕ ನಿಗಾವಳಿ ಮತ್ತು ಸಾಮಾಜಿಕ ಪರಿಶೀಲನೆಗಳನ್ನು ಬಲಪಡಿಸಬೇಕು ಎಂದು ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರು ತನಿಖಾ ತಂಡಕ್ಕೆ ಮನವಿ ಮಾಡಿದರು.









