ಆಳಂದ: ತಮ್ಮ ಬದುಕಿನೊದ್ದಕ್ಕೂ ಮಹಾಂತ ಜೋಳಿಗೆಯ ಮೂಲಕ ಸಂಚರಿಸಿ ಸಮಾಜದ ಜನರಲ್ಲಿನ ವ್ಯಸನ ಮುಕ್ತಗೊಳಿಸಲು ಶ್ರಮಿಸಿದ ಇಲಕಲ್ನ ಶ್ರೀ ಮಹಾಂತೇಶ್ವರ ಮಠದ ಶ್ರೀ ಲಿಂ. ಡಾ ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಜೊತೆಗೆ ಸರ್ಕಾರಿ ಆದೇಶದಂತೆ ತಾಲೂಕು ಆಡಳಿತಸೌಧನಲ್ಲಿ ವ್ಯಸನ ಮುಕ್ತ ದಿನಾಚರಣೆ ಆಚರಿಸಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಆರಂಭದಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪಾರ್ಚನೆ ನೆರವೇರಿಸಿದರು. ಉಪಸ್ಥಿತರಿದ್ದ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಅವರು ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರತಿಜ್ಞಾವಿಧಿ ಬೋಧಿಸಿದ ಅವರು, “ಮಧ್ಯಪಾನ, ಮಾದಕವಸ್ತು, ತಂಬಾಕು ವಸ್ತುಗಳ ಸೇವನೆಯು ನನಗೆ ಮತ್ತು ಮಾನವ ಸಮಾಜಕ್ಕೆ ಮಾರಕವೆಂದು ಇದರಿಂದ ಮಾನವ ದೇಹವಲ್ಲದೇ ಮನಸ್ಸು ಮತ್ತು ಸ್ವಾಸ್ಥ್ಯ ಸಮಾಜ ಅನಾರೋಗ್ಯ ಪೀಡಿತಾಗುತ್ತಿರುವುದು ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಜನತೆ ಇದರ ಪೀಡಿತವಾಗುತ್ತಿರುವುದು ತಿಳಿದಿದೆ.
ಇದರಿಂದ ಮಾನವನ ಆರ್ಥಿಕ, ಸಮಾಜಿಕ ಸ್ಥಿತಿ ಅಧೋಗತಿಗೆ ಇಳಿಯುತ್ತದೆ. ಅದ್ದರಿಂದ ಪೂಜ್ಯ ಶ್ರೀ ಮ. ನಿ. ಪ್ರ. ಡಾ ಮುಹಾಂತ ಶಿವಯೋಗಿ ಸ್ವಾಮಿಜಿಗಳ ಜನ್ಮದನ ಈ ಶುಭ ದಿನದಂದು ನಾನು ಮಧ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳನ್ನು ತ್ಯಜಿಸುತ್ತೇನೆ ಹಾಗೂ ಇನ್ನೆಂದಿಗೂ ಮುಟ್ಟುವುದಿಲ್ಲ ಹಾಗೂ ನನ್ನ ನೆರೆಹೊರೆಯವರಿಗೆ ಬಂಧು ಬಾಂಧವರಿಗೆ ಸ್ನೇಹಿತರಿಗೆ ಈ ಬಗ್ಗೆ ತಿಳಿವಳಿಕೆ ನೀಡುತ್ತೇನೆ ಎಂದು ಪ್ರಮಾಣವಚನ ಬೋಧಿಸಿದರು.
ಆಗಮಿಸಿದ್ದ ಸರ್ವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಿರಸ್ತೆದಾರ ರಾಕೇಶ ಶಿಲವಂತ, ಸಹಾಯಕ ಪ್ರಭಾರಿ ಕೃಷಿ ನಿರ್ದೇಶಕ ಬಿರಾದಾರ ಬನಸಿದ್ದ, ಕೃಷಿ ಅಧಿಕಾರಿ ಸರೋಜಾ ಕುಳಮುಟಗಿ, ಉಪ ನೋಂದಣಾಧಿಕಾರಿ ಶೃತಿ, ಆಕಾಶ ಸಜ್ಜನ್, ಸಂಗಮ್ಮ, ಶಿಲ್ಪಾ, ಸಮುನ್, ಎಫ್ಡಿಎ ಜಗನಾಥ ಧರೆ ಮತ್ತಿತರರು ಉಪಸ್ಥಿತರಿದ್ದರು.