ಆಳಂದ: ವಿದ್ಯಾಭ್ಯಾಸಕ್ಕೆ ಅಂತರಜಾಲವು ಪೂರಕವಾಗಬಹುದು, ಆದರೆ ಗ್ರಂಥಾಲಯವನ್ನು ಮೀರಿಸಲು ಸಾಧ್ಯವಿಲ್ಲ ಎಂದು ಸಿಯುಕೆ ಉಪ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
“ಡಿಜಿಟಲ್ ಮತ್ತು ಎಐ ಯುಗದಲ್ಲಿಯೂ ಗ್ರಂಥಾಲಯಗಳು ಹಾಗೂ ಗ್ರಂಥಪಾಲಕರು ತಮ್ಮ ಶಾಶ್ವತ ಪ್ರಾಮುಖ್ಯತೆಯನ್ನು ಕಾಪಾಡಿಕೊಂಡಿದ್ದಾರೆ. ಇಂದಿನ ವಿದ್ಯಾರ್ಥಿಗಳು ಗ್ರಂಥಾಲಯ ಮತ್ತು ಗ್ರಂಥಪಾಲಕರ ಮಾರ್ಗದರ್ಶನದಿಂದ ಜ್ಞಾನವನ್ನು ವಿಸ್ತರಿಸಿಕೊಂಡು ತಮ್ಮ ವಿದ್ಯಾಭ್ಯಾಸವನ್ನು ಬಲಪಡಿಸಿಕೊಳ್ಳಬೇಕು. ಅಂತರಜಾಲವು ಪೂರಕವಾಗಬಹುದು, ಆದರೆ ಗ್ರಂಥಾಲಯವನ್ನು ಮೀರಿಸಲು ಸಾಧ್ಯವಿಲ್ಲ,” ಎಂದು ಹೇಳಿದರು.
ಗ್ರಂಥಪಾಲಕ ಡಾ. ಪಿ.ಎಸ್. ಕಟ್ಟಿಮನಿ ಸ್ವಾಗತಿಸಿ, ಡಾ. ರಂಗನಾಥನ್ ಅವರ ಭಾರತೀಯ ಗ್ರಂಥಾಲಯ ಚಳವಳಿಗೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದರು. ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ಬಸವರಾಜ ಕುಬಕಡ್ಡಿ, ಉಪ ಗ್ರಂಥಪಾಲಕ ಡಾ. ಸತೀಶ ತೋಟಾರ್, ವಿವಿಧ ನಿಕಾಯಗಳ ಮುಖ್ಯಸ್ಥರು, ಗ್ರಂಥಾಲಯ ಸಿಬ್ಬಂದಿಗಳು ಹಾಗೂ ನೂರಾರು ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.









