ಆಳಂದ: “ಅಮಿಷದ ಒತ್ತಡಕ್ಕೆ ಒಳಗಾಗಿ ಯಾವುದೇ ವ್ಯಕ್ತಿಯು ಮಾನವ ಕಳ್ಳ ಸಾಗಾಣಿಕೆಗೆ ಬಲಿಯಾಗಬಾರದು. ಕಾನೂನು ಅರಿವಿನ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ. ಈ ದಿಕ್ಕಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು,” ಎಂದು ಆಳಂದದ ಸ್ಥಳೀಯ ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಜೆಎಂಎಫ್ಸಿ ಸದಸ್ಯ ಕಾರ್ಯದರ್ಶಿ ಕುಮಾರಿ ಸುಮನ್ ಚಿತ್ತರಗಿ ಅವರು ಹೇಳಿದರು.
ಪತ್ನಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಬುಧವಾರ ಕರ್ನಾಟಕ ಸರ್ಕಾರದ “ನ್ಯಾಯ ನಿಮ್ಮದು, ನೆರವು ನಮ್ಮದು” ಯೋಜನೆಯಡಿ ತಾಲೂಕು ಕಾನೂನು ಸೇವಾ ಸಮಿತಿ, ಆಳಂದ ನ್ಯಾಯವಾದಿಗಳ ಸಂಘ ಮತ್ತು ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಮುಂದುವರಿದು ಹೇಳಿದರು: “ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಮುದಾಯದಲ್ಲಿ ಕಾನೂನು ಅರಿವು ಮೂಡಿಸುವ ಮಹತ್ವದ ಹೆಜ್ಜೆಯಾಗಿದ್ದು, ಮಾನವ ಕಳ್ಳ ಸಾಗಾಣಿಕೆಯ ವಿರುದ್ಧ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ.”
ಸಂಪನ್ಮೂಲ ವ್ಯಕ್ತಿಯಾಗಿ ವಕೀಲ ಎಂ.ವಿ. ಏಕೋಟೆ ಅವರು ಭಾಗವಹಿಸಿ, ಮಾನವ ಕಳ್ಳ ಸಾಗಾಣಿಕೆಯ ಗಂಭೀರತೆ ಮತ್ತು ಅದನ್ನು ತಡೆಗಟ್ಟಲು ಅಗತ್ಯವಿರುವ ಕಾನೂನು ಕ್ರಮಗಳ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿವರಿಸಿದರು. “ಮಾನವ ಕಳ್ಳ ಸಾಗಾಣಿಕೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿ ಪರಿಗಣಿಸಲಾಗಿದೆ. ಇದನ್ನು ತಡೆಗಟ್ಟಲು ಸಮಾಜದ ಎಲ್ಲಾ ವರ್ಗಗಳು ಒಂದಾಗಿ ಕಾರ್ಯನಿರ್ವಹಿಸಬೇಕು,” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕ ಶ್ರೀಮಂತ ಹತ್ತರಕಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಮಲಾಕರ್ ವಿ. ರಾಥೋಡ್, ಸರ್ಕಾರಿ ವಕೀಲ ಇಸ್ಮಾಯಿಲ್ ಪಟೇಲ್, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಬಲಭೀಮ ಟಿ. ಸಿಂಧೆ, ನ್ಯಾಯವಾದಿಗಳು ಜ್ಯೋತಿ ಬಂಡಿ, ದೇವಾನಂದ ಹೋದಲರಕರ್, ಸ್ವಾಮಿರಾವ್ ಚನ್ನಗುಂಡ, ಬಿ.ಐ. ಶಿರೋಳೆ, ತಯಬ್ ಅಲಿ ಜರ್ದಿ ಮತ್ತು ಇತರರು ಉಪಸ್ಥಿತರಿದ್ದರು.
ಶಿಕ್ಷಕರು ಬಸವರಾಜ ಪಾಟೀಲ, ಪದ್ಮಜಾ ಕಟಕೆ, ಶೈನಜ್ ಬೇಗಂ, ಆಸ್ಮಾ ಆಲಂ, ಆಸ್ಮಾ ಜೆಬೀನ್, ಮೇರುನಿಸಾ ಬೇಗಂ, ಶಾಹೀನ್ ಬೇಗಂ, ದಶರಥ ಕಠಾರೆ, ದೇವಿಂದ್ರಪ್ಪ ಗೋಳಾ, ಮಹಾಂತಪ್ಪ ಬೊಪರೆಡ್ಡಿ, ಪ್ರಶಾಂತ ಪಾಟೀಲ ಅವರು ಸಹ ಭಾಗವಹಿಸಿದ್ದರು.
ನ್ಯಾಯವಾದಿ ಸುಧೀರ್ ಪಡಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಮಲ್ಲಿನಾಥ್ ಖಜೂರಿ ಸ್ವಾಗತಿಸಿದರು ಹಾಗೂ ನ್ಯಾಯವಾದಿ ಕಲ್ಯಾಣಿ ಶೇರಿಕಾರ ವಂದಿಸಿದರು.