ಆಳಂದ: ಪಟ್ಟಣದ ಪ್ರತಿಷ್ಠಿತ ಜೀವನ ಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾತೋಶ್ರೀ ಭೀಮಬಾಯಿ ಹಣಮಯ್ಯ ಗುತ್ತೇದಾರ ಸ್ಮಾರಕ ಪ್ರೌಢಶಾಲೆಯ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳಿಂದ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾದ ಶಾಲೆಯ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ
ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಹರ್ಷಾ ಗುತ್ತೇದಾರ, “ಶಿಕ್ಷಣವೆಂಬುದು ವ್ಯಕ್ತಿಯ ಬದುಕನ್ನು ರೂಪಿಸುವುದರ ಜೊತೆಗೆ ಸಮಾಜದ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸ್ಥಾಪಿತವಾದ ಈ ಶಾಲೆ, ಇಂದಿಗೆ ಅನೇಕ ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಹೆಮ್ಮೆಯ ಸಂಗತಿ” ಎಂದರು. ಹಳೆಯ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ನೆಲೆಸಿದ್ದರೂ ತಮ್ಮ ಶಾಲೆಯ ಮೌಲ್ಯಗಳನ್ನು ಮರೆಯದೇ ಮತ್ತೆ ಒಂದಾಗಿರುವುದು ಶಿಕ್ಷಣದ ಬಲವನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಸ್ಥೆಯ ಆಡಳಿತಾಧಿಕಾರಿ ಹಣಮಂತ ಶೇರಿ ಮಾತನಾಡಿ, “2000ನೇ ಸಾಲಿನಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇಂದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿ ಇರುವ ಹಳೆಯ ವಿದ್ಯಾರ್ಥಿಗಳೇ ಈ ರಜತ ಮಹೋತ್ಸವವನ್ನು ಹಮ್ಮಿಕೊಂಡಿರುವುದು, ಸಂಸ್ಥೆಯ ಶೈಕ್ಷಣಿಕ ನೆಲೆಯನ್ನು ಸ್ಪಷ್ಟಪಡಿಸುತ್ತದೆ. ಮುಂದಿನ ದಿನಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯ ಸೌಲಭ್ಯಗಳನ್ನು ಇನ್ನಷ್ಟು ವಿಸ್ತರಿಸುವ ಗುರಿಯಿದೆ” ಎಂದು ತಿಳಿಸಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ ಮಾತನಾಡಿ, “ಗುರು–ಶಿಷ್ಯ ಪರಂಪರೆ ಉಳಿದಾಗಲೇ ಶಿಕ್ಷಣದ ಮೌಲ್ಯ ಉಳಿಯುತ್ತದೆ. ಈ ರೀತಿಯ ಗುರುವಂದನಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕೃತಜ್ಞತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುತ್ತವೆ” ಎಂದರು.
ಪಿಯು ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ, ಎಂಪಿಎಂಜಿ ಪಿಯು ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ ಹಾಗೂ ಎಂಬಿಎಚ್ಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಲ್ಲಿನಾಥ ತುಕ್ಕಾಣೆ ಅವರು ಮಾತನಾಡಿ, ಶಾಲೆಯ ಶೈಕ್ಷಣಿಕ ಸಾಧನೆ, ಶಿಕ್ಷಕರ ತ್ಯಾಗ ಮತ್ತು ಹಳೆಯ ವಿದ್ಯಾರ್ಥಿಗಳ ಕೊಡುಗೆಯನ್ನು ಶ್ಲಾಘಿಸಿದರು.
ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮದ ಸಂಯೋಜಕ ಹಾಗೂ ಕಲಬುರಗಿಯ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಾರಾಮ ವಾಡೇದ ಮಾತನಾಡಿ, “ಈ ಶಾಲೆ ನಮಗೆ ಕೇವಲ ಪಾಠವಷ್ಟೇ ಅಲ್ಲ, ಬದುಕಿನ ಮೌಲ್ಯಗಳನ್ನು ಕಲಿಸಿತು. ಇಂದು ನಾವು ಎಲ್ಲೆಲ್ಲೇ ಇದ್ದರೂ ನಮ್ಮ ಬೇರುಗಳು ಇಲ್ಲಿಯೇ ಇವೆ” ಎಂದು ಭಾವನಾತ್ಮಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಶೋಕ ಗುತ್ತೇದಾರ, ಸುರೇಶ ತೋಳೆ, ಶರಣು ಅಚಲೇರಿ, ರಾಜೇಂದ್ರ ಬಾವಿ, ಸಿದ್ಧರಾಮ ದೋತ್ರೆ, ವಿಜಯಲಕ್ಷ್ಮೀ ಬಿರಾದಾರ, ಸೈಯದ ಅಬಿದಲಿ, ಸಂಸ್ಥೆಗೆ ಸೇವೆ ಸಲ್ಲಿಸಿದ ರಾಜೇಂದ್ರ ಬೋಳಶೆಟ್ಟಿ, ಸಂತೋಷ ವೇದಪಾಠಕ, ಸಂತೋಷ ಕಾಮಣೆ, ಸಂಜಯ ಮೋರೆ, ಸುಭಾಷ ಮೈಂದರಗಿ, ಗುಂಡೇರಾವ್ ಪಾಟೀಲ ಕವಲಗಾ, ಇಶಾಕ್ ಅಲಿ, ಶಿವಾನಂದ ಚಿಲಾಮಣಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾಶಿನಾಥ ಹಿರೇಮಠ ನಿರೂಪಿಸಿದರು. ಪವನ ಹಿರೇಮಠ ಸ್ವಾಗತ ಭಾಷಣ ಮಾಡಿದರು. ಅನೀತಾ ಹತ್ತರಕಿ ವಂದಿಸಿದರು.









