ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಅಖಿಲ ಕರ್ನಾಟಕ ದಲಿತ ಸೇನೆಯಿಂದ ಪ್ರತಿಭಟನಾ ಧರಣಿಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ತನಿಖೆ–ಅಮಾನತ್ತಿಗೆ ಆಗ್ರಹ.

On: December 18, 2025 5:32 PM

ಆಳಂದ: ತಾಲೂಕು ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ದಲಿತ ಸೇನೆಯ ತಾಲೂಕು ಘಟಕವು ಅಧ್ಯಕ್ಷ ಭೋಜರಾಜ ಜುಬ್ರೆ ಅವರ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಧರಣಿ ನಡೆಸಿತು. ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಬಿ.ಎಂ. ಬಿರಾದಾರ್ ಅವರ ಮೇಲೆ ಹಲವು ಗಂಭೀರ ಆರೋಪಗಳನ್ನು ಮಂಡಿಸಿ, ಹೆಚ್ಚುವರಿ ಹುದ್ದೆಗಳ ರದ್ದು, ಸಂಪೂರ್ಣ ತನಿಖೆ ಹಾಗೂ ಅಮಾನತು ಸೇರಿದಂತೆ ಆರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಕೃಷಿ ಕಚೇರಿ ಮುಂದೆ ಸತ್ಯಾಗ್ರಹ ನಡೆಸಿದರು.

ಬಸ್ ನಿಲ್ದಾಣದಿಂದ ಕೃಷಿ ಇಲಾಖೆಯ ಕಚೇರಿವರೆಗೆ ಮೆರವಣಿಗೆ ನಡೆಸಿದ ಬಳಿಕ ಧರಣಿ ಮುಂದುವರೆಸಿದ ಕಾರ್ಯಕರ್ತರು, ಸ್ಥಳಕ್ಕೆ ಆಗಮಿಸಿದ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಭೋಜರಾಜ್ ಟಿ. ಜುಬೈ ಅವರು, “ತಾಂತ್ರಿಕ ಅಧಿಕಾರಿಯಾಗಿರುವ ಬಿ.ಎಂ. ಬಿರಾದಾರ್ ಅವರು ಒಂದೇ ಸಮಯದಲ್ಲಿ ಐದು ಹುದ್ದೆಗಳನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ. ಇದು ಕಾನೂನು ಉಲ್ಲಂಘನೆಯಾಗಿದ್ದು, ಕೂಡಲೇ ಆ ಹುದ್ದೆಗಳನ್ನು ರದ್ದುಪಡಿಸಿ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ದಲಿತ ರೈತರಿಗೆ ನೀಡಲಾಗುವ ಸ್ಪ್ರಿಂಕ್ಲರ್ ಪೈಪ್‌ಗಳು, ತಾಡಪತ್ರಿ, ರಾಶಿ ಮೆಷಿನ್, ಪ್ಲಾಟ್‌ಫಾರ್ಮ್ ನೇಗಿಲು, ಮೇವು ಕತ್ತರಿಸುವ ಯಂತ್ರಗಳಂತಹ ಸೌಲಭ್ಯಗಳಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ಮತ್ತು ವಂಚನೆ ನಡೆದಿದೆ ಎಂದು ಆರೋಪಿಸಿದರು. “ಈ ಎಲ್ಲಾ ಯೋಜನೆಗಳ ಅನುಷ್ಠಾನದಲ್ಲಿ ನಡೆದ ಅವ್ಯವಹಾರಗಳ ಕುರಿತು ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಯಬೇಕು” ಎಂದು ಹೇಳಿದರು.

2025–26 ಸಾಲಿನ ‘ಮಾಡೆಲ್ ವಾಟರ್‌ಶೆಡ್ ಪಿಎಂಕೆಎಸ್‌ವೈ 2.0 ಸ್ಟ್ರೀಮ್ ಮಾಡೆಲ್ ಜಲಾಯನ ಯೋಜನೆ’ಯಡಿ 10 ಕೋಟಿ ರೂ. ಅನುದಾನ ಮೀಸಲಾಗಿದ್ದರೂ, ಅಂದಾಜು ಪತ್ರಿಕೆ ತಯಾರಿ, ಬಿಲ್ ಅನುಮೋದನೆ ಹಾಗೂ ಹಣ ಪಾವತಿ ಅಧಿಕಾರವನ್ನು ಖಾಸಗಿ ವ್ಯಕ್ತಿಗೆ ನೀಡಿರುವುದು ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಜುಬೈ ಆರೋಪಿಸಿದರು. “ಈಗಾಗಲೇ ಸುಮಾರು 2 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ತಮ್ಮ ಆಪ್ತರಿಗೆ ನೀಡಿ ಮುಗಿಸಿರುವ ಮಾಹಿತಿ ನಮ್ಮ ಬಳಿ ಇದೆ. ಈ ಹಣದ ಪಾವತಿಯನ್ನು ಕೂಡಲೇ ತಡೆಹಿಡಿಯಬೇಕು” ಎಂದು ಅವರು ಒತ್ತಾಯಿಸಿದರು.

ಸೇನೆಯ ಗೌರವ ಅಧ್ಯಕ್ಷ ಆನಂದ ಗಾಯಕವಾಡ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ರೈತರ ಹೊಲಗಳಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ಕೆರೆ ಹೂಳೆತ್ತುವಂತಹ ಕಾಮಗಾರಿಗಳಿಗೆ ಬೋಗಸ್ ಬಿಲ್‌ಗಳು ಹಾಗೂ ನಕಲಿ ಎನ್‌.ಎಂ‌.ಆರ್ ಸೃಷ್ಟಿಸಿ ಹಣ ಎತ್ತಲಾಗಿದೆ ಎಂದು ಆರೋಪಿಸಿದರು. “ಈ ಪ್ರಕರಣಗಳ ಕುರಿತು ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

ಕಳೆದ ಜೂನ್‌ನಲ್ಲಿ ರೈತರಿಗೆ ವಿತರಿಸಲಾದ ಸೋಯಾಬೀನ್, ಉದ್ದು, ಹೆಸರು, ಕಡಲೆ ಸೇರಿದಂತೆ ಬೀಜಗಳು ಹಾಗೂ ರಸಗೊಬ್ಬರಗಳು ಕಳಪೆ ಗುಣಮಟ್ಟದ್ದಾಗಿದ್ದು ರೈತರಿಗೆ ವಂಚನೆ ಮಾಡಲಾಗಿದೆ. ಮಳೆಯಿಂದ ಬೆಳೆ ನಾಶವಾದರೂ ಕಚೇರಿಯಲ್ಲಿ ಕುಳಿತು ಅಪೂರ್ಣ ವರದಿ ಸಲ್ಲಿಸಿ ರೈತರಿಗೆ ಪರಿಹಾರ ವಂಚಿಸಲಾಗಿದೆ ಎಂದು ಅವರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಜೈಕಾಂತ್ ವಾಗ್ಮಾರೆ, ಸಂಘಟನಾ ಕಾರ್ಯದರ್ಶಿ ಶರಣಬಸಪ್ಪ ಕಾಳೆಕಿಂಚಿ, ಉಪಾಧ್ಯಕ್ಷರು ದಿಗಂಬರ ಮಂಟಗಿ, ದಿಲೀಪ್ ಭಂಡಾರಿ, ದೇವೇಂದ್ರ ಹಂಗರಗಿ, ದತ್ತಾತ್ರೇಯ ಕೋಚಿ, ಬಸವರಾಜ ಕಾಂಬಳೆ, ರವೀಂದ್ರ ಮೇಲಕೇರಿ, ರಾಜಕುಮಾರ್ ಸಿಂಗೆ, ಪ್ರವೀಣ್ ತಡೋಳ, ಬಂಡಪ್ಪ ಮಂಟಕಿ, ಸಿದ್ಧರಾಮ ಖಾನಾಪೂರ, ಸೋಮನಾಥ ಸಲಗರೆ, ಸಂದೀಪ ಜಮಾದಾರ್, ಖಾಜಿಪಾ ಜಂಗೆ, ಸಿದ್ಧರಾಮ ಕವಲಗಾ, ಚಿದಾನಂದ ಝಳಕಿ, ಲಕ್ಷ್ಮೀಪುತ್ರ ಸಿಂಘೆ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

ಸ್ಥಳಕ್ಕೆ ಆಗಮಿಸಿದ ಮೇಲಾಧಿಕಾರಿಗಳು ಮನವಿ ಪತ್ರವನ್ನು ಸ್ವೀಕರಿಸಿ, ಆರೋಪಗಳ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಗಡುವು ನೀಡಿ ಧರಣಿ ಹಿಂದಕ್ಕೆ ಪಡೆದರು.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!