ಕಲಬುರಗಿ: ಭಾರತ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವ ಕಾರ್ಗಿಲ್ ವಿಜಯ ದಿವಸ್ ನಿಮಿತ್ತ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (CUK) ಇದರ ಎನ್ಎಸ್ಎಸ್ ಘಟಕದ ವತಿಯಿಂದ ಜುಲೈ 26ರಂದು ಶ್ರದ್ಧಾಭಿವಂದನೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವು ಸೈನಿಕರ ನೆನಪಿನಲ್ಲಿ ಮೇಣದ ಬತ್ತಿ ಬೆಳಗಿಸುವ ಮೂಲಕ ಆರಂಭವಾಯಿತು. ವಿದ್ಯಾರ್ಥಿಗಳು, ಎನ್ಎಸ್ಎಸ್ ಸ್ವಯಂಸೇವಕರು, ಅಧ್ಯಾಪಕರು ಮತ್ತು ಸಂಶೋಧಕರು ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೇಣದ ಬತ್ತಿ ಬೆಳಗುವುದು ಸೈನಿಕರ ಬಲಿದಾನಕ್ಕೆ ಗೌರವ ಸೂಚಿಸುವ ಸಂಕೇತವಾಗಿ ಉಪಯೋಗಿಸಲಾಯಿತು.
ಈ ನಂತರ ನಡೆದ ಸಭೆಯಲ್ಲಿ ಡಾ. ಬುಚಿ ರೆಡ್ಡಿ ಪೋರೆಡ್ಡಿ (ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ) ಅವರು ಮಾತನಾಡಿ, “ನಮ್ಮ ದೇಶದ ರಕ್ಷಣೆಗೆ ಸೈನಿಕರು ನೀಡುವ ತ್ಯಾಗವು ಅಪಾರ. ಅವರ ಶೌರ್ಯವು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆಯಾಗಿದೆ. ಅವರನ್ನು ಸದಾ ಸ್ಮರಿಸಬೇಕು,” ಎಂದು ಹೇಳಿದರು.
ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಭಾವನಾ ಅವರು ಕಾರ್ಗಿಲ್ ಯುದ್ಧದ ಇತಿಹಾಸವನ್ನು ವಿವರಿಸುತ್ತಾ, ಸೈನಿಕರ ಧೈರ್ಯ ಮತ್ತು ತ್ಯಾಗದ ಮಹತ್ವವನ್ನು ಒತ್ತಿಹೇಳಿದರು. ಸೈನಿಕರ ಕುಟುಂಬಗಳ ಸವಾಲುಗಳ ಜೀವನದ ಕುರಿತು ಅವರು ಆಳವಾದ ಚಿಂತನೆಯನ್ನು ಹಂಚಿಕೊಂಡರು.
ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಕ್ರೀಡಾ ಸಂಯೋಜಕರಾದ ಡಾ. ವಿ. ಸಾಯಿ ಅಭಿನವ್ ಅವರು ಮಾತನಾಡಿ, ಸಶಸ್ತ್ರ ಪಡೆಗಳ ಧೈರ್ಯ, ಶಿಸ್ತು ಮತ್ತು ದೇಶಭಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಲ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಅವರ ಹೃದಯಸ್ಪರ್ಶಿ ಮಾತುಗಳು ಸಭಿಕರಲ್ಲಿ ರಾಷ್ಟ್ರಭಕ್ತಿಯ ಬಾವನೆಯನ್ನು ಬೆಳೆಸಿದವು.
ಈ ಕಾರ್ಯಕ್ರಮವು ಯುವಜನತೆಯಲ್ಲಿ ದೇಶಪ್ರೇಮ ಮತ್ತು ಸೈನಿಕರ ಬಲಿದಾನದ ಬಗ್ಗೆ ಜಾಗೃತಿ ಮೂಡಿಸಿತು. ಭಾರತ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಮರ್ಪಣೆಯ ಪ್ರತಿಬಿಂಬವಾಗಿ ಈ ಕಾರ್ಯಕ್ರಮವು ಎನ್ಎಸ್ಎಸ್ ಘಟಕದ ಸಕ್ರಿಯ ಭೂಮಿಕೆಯನ್ನು ತೋರಿಸಿತು.