ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದ ತಾಲೂಕು ಪ್ರವಾಹ ಹಾನಿ – ತಕ್ಷಣ ಸ್ಪಂದನೆಗೆ ಜಿಪಂ ಸಿಇಒ ಭಂವಾರಸಿಂಗ್ ಮೀನಾ ಸೂಚನೆ.

On: September 12, 2025 6:16 PM

ಆಳಂದ: ಇತ್ತೀಚಿನ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಗೋಗಾಂವ ಕೆರೆ ವೆಷ್ಟವೇರ ಹಾಗೂ ಕೆರೆ ಬದುವಿನಿಂದ ನೀರು ಉಕ್ಕಿ ಹರಿದು ಆಳಂದ ತಾಲೂಕಿನ ಹಲವು ಹಳ್ಳಿಗಳಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ತಡೋಳಾ, ನಿರಗುಡಿ, ಖಾನಾಪೂರ ಸೇರಿ ಶಖಾಪೂರ ರಾಜ್ಯ ಹೆದ್ದಾರಿ, ವಾಗ್ದರಿ–ರಿಬ್ಬನಪಲ್ಲಿ ಮಾರ್ಗದವರೆಗೂ ಪ್ರವಾಹದಿಂದ ಸೇತುವೆ, ರಸ್ತೆ, ಹೊಲ ಜಮೀನು, ವಿದ್ಯುತ್ ಕಂಬಗಳು ಕೊಚ್ಚಿಕೊಂಡು ಹೋಗಿವೆ. ಕಬ್ಬು ಮತ್ತು ತೊಗರಿ ಸೇರಿದಂತೆ ಸಾವಿರಾರು ಎಕರೆ ಬೆಳೆ ಹಾನಿಗೊಳಗಾಗಿದ್ದು, ಅನೇಕ ಜಾನುವಾರುಗಳ ಸಾವು ಕೂಡ ವರದಿಯಾಗಿದೆ.

ಈ ಸಂದರ್ಭದಲ್ಲಿ, ಜಿಪಂ ಸಿಇಒ ಭಂವಾರಸಿಂಗ್ ಮೀನಾ ಅವರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಶಖಾಪೂರ ಮತ್ತು ಜೀರೋಳಿ ಸೇತುವೆಗಳನ್ನು ಹಾಗೂ ಹೊಲಗಳನ್ನು ಪರಿಶೀಲಿಸಿದರು. ಖಾನಾಪೂರ–ಜೀರೋಳಿ, ಶಖಾಪೂರ–ಜೀರೋಳಿ, ಜಿರೋಳಿ–ಚಿಂಚೋಳಿ ಬಿ, ಚಿಂಚೋಳಿ–ಕೆ ರಸ್ತೆಗಳ ಸಂಪರ್ಕ ಕಡಿತಗೊಂಡಿರುವುದನ್ನು ಗಮನಿಸಿ, ನಾಳೆಯಿಂದಲೇ ತುರ್ತು ಕಾಮಗಾರಿ ಕೈಗೊಂಡು ಸಂಪರ್ಕ ಪುನಃಸ್ಥಾಪನೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಬೆಳೆಹಾನಿಯ ಕುರಿತು ನಿಖರವಾದ ವರದಿ ತಕ್ಷಣ ಸಲ್ಲಿಸುವಂತೆ ಆದೇಶಿಸಿದರು. ಮೋಘಾ–ಸಾವಳೇಶ್ವರ, ಹಿರೋಳಿ–ಭೀಂಪೂರ ಸಂಪರ್ಕ ರಸ್ತೆ ಕೊಚ್ಚಿಹೋಗಿರುವುದರಿಂದ ತ್ವರಿತ ಕಾಮಗಾರಿ ನಡೆಸಬೇಕು ಎಂದು ಹೇಳಿದರು. ಪ್ರವಾಹದಿಂದಾಗಿ ಒಟ್ಟು 8 ಸೇತುವೆಗಳು ಹಾಗೂ 11 ರಸ್ತೆ ಹಾನಿಗೊಳಗಾದರೆ, ಈ ಮೊದಲು ಸುರಿದ ಮಳೆಯಿಂದಾಗಿ 18 ರಸ್ತೆ ಮತ್ತು 8 ಸೇತುವೆಗಳು ಈಗಾಗಲೇ ಹಾನಿಯಾಗಿರುವ ಮಾಹಿತಿ ಜಿಪಂ ಎಇಇ ಸಂಗಮೇಶ ಬಿರಾದರ ಅವರು ಸಿಇಒ ಅವರಿಗೆ ನೀಡಿದರು.

ಇದಲ್ಲದೆ, ಪ್ರವಾಹದ ಪರಿಣಾಮ 22 ವಿದ್ಯುತ್ ಕಂಬಗಳು ಹಾಗೂ 5 ಟ್ರಾನ್ಸ್ಫಾರ್ಮರ್‍ಗಳು ಉರುಳಿ ಬಿದ್ದಿದ್ದು, ಒಂದು ಟ್ರಾನ್ಸ್ಫಾರ್ಮರ್ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಹಲವು ಹಳ್ಳಿಗಳು ವಿದ್ಯುತ್ ಸಂಪರ್ಕವಿಲ್ಲದೆ ಸಮಸ್ಯೆ ಅನುಭವಿಸುತ್ತಿವೆ. ಸ್ಥಳೀಯರು ತಮಗೆ ಸಂಭವಿಸಿದ ಹಾನಿ ಮತ್ತು ತೊಂದರೆಗಳನ್ನು ಅಧಿಕಾರಿಗಳ ಮುಂದೆ ಅಳಲಾಗಿ ಹಂಚಿಕೊಂಡರು.

ಸಿಇಒ ಮೀನಾ ಅವರು, “ಪ್ರವಾಹ ಹಾನಿಗೆ ಸಂಬಂಧಿಸಿದ ಕ್ರಿಯಾ ಯೋಜನೆ ತಕ್ಷಣ ಸಲ್ಲಿಸಿದರೆ, ಎನ್‍ಡಿಆರ್‍ಎಫ್ ನಿಯಮದಂತೆ 60 ಸಾವಿರ ರೂಪಾಯಿಗಿಂತ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಮಂಜೂರಾತಿ ಪಡೆಯಬಹುದು. ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕ ಪುನಃಸ್ಥಾಪನೆಗೆ ತಕ್ಷಣ ಕಾಮಗಾರಿ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಜಿಲ್ಲಾ ಪಂಚಾಯಿತಿ ಎಇಇ ಸಂಗಮೇಶ್ ಬಿರಾದಾರ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸುರೇಂದ್ರನಾಥ ಹೊನ್ನಪ್ಪಗೋಳ, ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಬನ್ಸಿದ್ದಪ್ಪ ಬಿರಾದಾರ್ ಸೇರಿದಂತೆ ಜೆಸ್ಕಾಂ ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Join WhatsApp

Join Now

Leave a Comment

error: Content is Protected!