ಆಳಂದ: ಪಟ್ಟಣದಲ್ಲಿ 5ನೇ ದಿನಕ್ಕೆ ಮುಂದುವರೆದ ರಸ್ತೆ ಅಗಲೀಕರಣ ಸ್ವಯಂ ತೆರವಿಗೆ ಮುಖ್ಯ ರಸ್ತೆಯ ಸಿದ್ದಿಕಿ ಮಸೀದಿ ಸಮಿತಿಯು ತೋರಿದ ಸ್ವಯಂಪ್ರೇರಿತ ಸಹಕಾರ ಆಡಳಿತ ವಲಯ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಭಾನುವಾರ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಪಟ್ಟಣದ ಅಭಿವೃದ್ಧಿಗೆ ಬೆಂಬಲವಾಗಿ ಸಿದ್ದಿಕಿ ಮಸೀದಿಗೆ ಸೇರಿದ್ದ ಒಟ್ಟು 11 ಅಂಗಡಿಗಳನ್ನು ಹಾಗೂ ಮಸೀದಿಯ ಕೌಂಪೌಂಡ್ ಗೋಡೆಗೆ ಯಾವುದೇ ವಿರೋಧವಿಲ್ಲದೆ ಸ್ವಯಂವಾಗಿ ಕೆಡವಿ ಸಹಕರಿಸಲಾಗುವುದು ಎಂದು ಘೋಷಿಸಿರುವ ಸಮಿತಿಯ ಮುಖಂಡರು ಸಾಮಾಜಿಕ ಹೊಣೆಗಾರಿಕೆ ಹಾಗೂ ಸೌಹಾರ್ದತೆಯ ಸ್ಪಷ್ಟ ಉದಾಹರಣೆಯಾಗಿ ಸಂದೇಶ ರವಾನಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಿಕಿ ಮಸೀದಿ ಸಮಿತಿಯ ಅಧ್ಯಕ್ಷ ಇಕ್ಬಾಲ್ ಮೈಂದರ್ಗಿ ಅವರು, ರಸ್ತೆ ಅಗಲೀಕರಣ ಕಾರ್ಯದಲ್ಲಿ ಸಮಿತಿಯು ಸಂಪೂರ್ಣವಾಗಿ ಆಡಳಿತದೊಂದಿಗೆ ನಿಂತಿದ್ದು, ಮುಂದಿನ ಹಂತಗಳಲ್ಲಿಯೂ ಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಸ್ಲಿಂ ಸಮುದಾಯ ಒಗ್ಗಟ್ಟಿನಿಂದ ಬೆಂಬಲ ನೀಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಭಿವೃದ್ಧಿ ಕಾರ್ಯಗಳು ಎಲ್ಲರ ಹಿತಕ್ಕಾಗಿ ಇರುವುದರಿಂದ ಮುಂದಿನ ದಿನಗಳಲ್ಲಿಯೂ ಇಂತಹ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ನಾಗರಿಕರು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಮುಖಂಡ ಆರೀಪ್ ಅಲಿ ಲಂಗಡೆ ಸೇರಿ ಇತರರು ಇದ್ದರು.
ಈ ಸಂದರ್ಭದಲ್ಲಿ ಹಾಜರಿದ್ದ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು, ಮಸೀದಿ ಸಮಿತಿಯ ಸ್ವಯಂಪ್ರೇರಿತ ಕ್ರಮವನ್ನು ವಿಶೇಷವಾಗಿ ಶ್ಲಾಘಿಸಿ, “ಅಭಿವೃದ್ಧಿ ಕಾರ್ಯಗಳಿಗೆ ಮುಸ್ಲಿಂ ಸಮುದಾಯ ತೋರಿದ ಸಹಕಾರ ಮತ್ತು ಸಕಾರಾತ್ಮಕ ಮನೋಭಾವವು ಆಡಳಿತಕ್ಕೆ ದೊಡ್ಡ ಶಕ್ತಿಯಾಗಿದೆ. ಮಸೀದಿ ಸಮಿತಿಯವರೇ ಮುಂದೆ ಬಂದು ಅಂಗಡಿಗಳನ್ನು ಕೆಡವಲು ಮುಂದಾದದ್ದೇ ಈ ಕಾರ್ಯಾಚರಣೆ ಸುಗಮವಾಗಿ ನಡೆಯಲು ಮತ್ತಷ್ಟು ಅನುಕೂಲವಾಗಿದೆ. ರಸ್ತೆ ಅಗಲೀಕರಣದಿಂದ ಪ್ರಭಾವಿತವಾಗುವ ಉಳಿದ ಎಲ್ಲ ಸಮುದಾಯದ ಆಸ್ತಿಗಳಿರುವ ಇತರ ಪ್ರದೇಶಗಳಲ್ಲಿಯೂ ಇದೇ ರೀತಿಯ ಸಂಪೂರ್ಣ ಬೆಂಬಲ ವ್ಯಕ್ತವಾಗುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ” ಎಂದು ಮುಖ್ಯಾಧಿಕಾರಿಗಳು ಹೇಳಿದರು.
1.4 ಕಿಮೀ. ರಸ್ತೆಯ ಉದ್ದಕ್ಕೆ ಹಲವು ಮಸೀದಿ ಹಾಗೂ ದೇವಸ್ಥಾನಗಳಿಗೆ ಸೇರಿದ ಅಂಗಡಿ ಕಾಂಪ್ಲೆಕ್ಸ್ಗಳು ಒಳಗೊಂಡಿವೆ ಆದರೆ ಮೇಲ್ನೋಟಕ್ಕೆ ಎಲ್ಲರ ಸಹಮತಿ ಕಂಡುಬರತೊಡಗಿದೆ.









