ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ವಿಂಡ್ ಕಂಪನಿಗಳ ಶೋಷಣೆ ವಿರುದ್ಧ ಆಡಳಿತ ಸೌಧದಲ್ಲಿ ಪ್ರತಿಭಟನೆಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ.

On: December 17, 2025 12:50 PM

ಆಳಂದ: ತಾಲೂಕಿನಲ್ಲಿ ಪವನ ವಿದ್ಯುತ್ ಶಕ್ತಿ ಉತ್ಪಾದಕ ಕಂಪನಿಗಳ ಶೋಷಣೆಯ ವಿರುದ್ಧ ರೈತರು ಬೃಹತ್ ಪ್ರತಿಭಟನಾ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಆಡಳಿತ ಸೌಧದ (ತಹಸೀಲ್ದಾರ್ ಕಚೇರಿ) ಮುಂದೆ ಯುವ ಮುಖಂಡ ಸಿದ್ದು ಹಿರೋಳಿ ನೇತೃತ್ವದಲ್ಲಿ ಮಂಗಳವಾರ ನಡೆದ ಬೃಹತ್ ಪ್ರತಿಭಟನಾ ಧರಣಿ ಸತ್ಯಾಗ್ರಹದಲ್ಲಿ ನೂರಾರು ರೈತರು ಮತ್ತು ಮಠಾಧೀಶರು ಭಾಗವಹಿಸಿ, ಕಂಪನಿಗಳ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕಿ ಕ್ರಮಕ್ಕಾಗಿ ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನಾ ಧರಣಿಗೆ ನೇತೃತ್ವ ವಹಿಸಿ ಮಾತನಾಡಿದ ಸಿದ್ದು ಸಿ. ಹಿರೋಳಿ ಅವರು, ಪವನ ಶಕ್ತಿ ಕಂಪನಿಗಳು ಸರ್ಕಾರಿ ನಿಗದಿ ದರಗಳನ್ನು (ಒಣ ಭೂಮಿಗೆ 30 ಲಕ್ಷ, ನೀರಾವರಿ ಭೂಮಿಗೆ 40 ಲಕ್ಷ ರೂ. ಪ್ರತಿ ಎಕರೆ) ತಿರಸ್ಕರಿಸಿ, ದಲ್ಲಾಳಿಗಳ ಮೂಲಕ ಕಡಿಮೆ ದರದಲ್ಲಿ ರೈತರ ಜಮೀನುಗಳನ್ನು ಖರೀದಿಸುತ್ತಿವೆ ಎಂದು ಆರೋಪಿಸಿದರು. ತಾಲೂಕಿನಲ್ಲಿ ಶಿರಪೂರ ಮಾದರಿಯಲ್ಲಿ ನಾಲಾ ಹೂಳೆತ್ತುವುದು, ಚೆಕ್ ಡ್ಯಾಂ ನಿರ್ಮಾಣದಿಂದ ಅಂತರ್ಜಲ ಮಟ್ಟ ಹೆಚ್ಚಿಸುತ್ತಿರುವಾಗ ಈ ಜಮೀನುಗಳು ಕಳೆದುಕೊಳ್ಳುವುದು ರೈತರಿಗೆ ಶಾಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, ತಾಲೂಕಿನ ಸುಮಾರು 2,000 ಎಕರೆ ಭೂಮಿ ಕಂಪನಿಗಳ ಕೈಗೆ ಸಿದ್ಧವಾಗಿದ್ದು, ರೈತರ ಜೀವನಾಡಿ ಕಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಭೀಮಾ ನದಿ ಯೋಜನೆಯಿಂದ ನೀರಾವರಿ ಸೌಲಭ್ಯಗಳು ದೊರೆತಿರುವಾಗ ಈ ಜಮೀನುಗಳು ಕಳೆದುಕೊಂಡರೆ ರೈತರು ಹೇಗೆ ಬದುಕಬೇಕು? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಕಲಬುರಗಿಯ ಹೋರಾಟಗಾರ ಡಾ. ರಾಘವೇಂದ್ರ ಚಿಂಚನಸೂರು ಮಾತನಾಡಿ, “ಪವನ ಶಕ್ತಿ ಉತ್ಪಾದನೆಯಿಂದ ತಾಲೂಕಿನ ನಿರುದ್ಯೋಗಿಗಳಿಗೆ ಯಾವ ಉದ್ಯೋಗ ದೊರೆಯುತ್ತದೆ? ಕಂಪನಿಗಳು ಕೋಟಿಗಟ್ಟಲೆ ಲಾಭ ಮಾಡಿ ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರುತ್ತವೆ, ಆದರೆ ಸ್ಥಳೀಯರಿಗೆ ಯಾವ ಪ್ರಯೋಜನವೂ ಇಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.

“ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಕಂಪನಿಗಳು ರೈತರನ್ನು ಶೋಷಿಸುತ್ತಿವೆ. ಒಬ್ಬ ರೈತನಿಗೆ ಒಂದು ದರ, ಮತ್ತೊಬ್ಬನಿಗೆ ಬೇರೆ ದರ ನೀಡಿ ದಲ್ಲಾಳಿಗಳ ಮೂಲಕ ಜಮೀನುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಸಂಪೂರ್ಣ ಅನ್ಯಾಯ” ಎಂದು ಆರೋಪಿಸಿದರು.

ಬೆಂಬಲಿಸಿ ಮಾತನಾಡಿದ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಿದ್ಧಲಿಂಗ ಮಲಶೆಟ್ಟಿ, ಖಜೂರಿಯ ಶ್ರೀಶೈಲ್ ಭೀಂಪೂರೆ, ನ್ಯಾಯವಾದಿ ಮಹದೇವ ಹತ್ತಿ, ಡಾ. ಮಹಾದೇವ ಮೊಘ, ಶೇಖರ ಮುನ್ನೊಳಿ ಸೇರಿದಂತೆ ಅನೇಕರು ಮಾತನಾಡಿ, ವಿಂಡ್ ಕಂಪನಿಗಳು ಕಾನೂನು ಉಲ್ಲಂಘಿಸಿ ರೈತರಿಗೆ ಮತ್ತು ಸರ್ಕಾರಕ್ಕೆ ವಂಚಿಸುತ್ತಿವೆ ಎಂದರು. ತಾಲೂಕು ಆಡಳಿತ ಗಮನಕೊಡದೆ ಸಂಬಂಧವಿಲ್ಲದಂತೆ ವರ್ತಿಸುವುದನ್ನು ಬಿಟ್ಟು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

“ಸ್ವಾತಂತ್ರ್ಯದ ನಂತರ 75 ವರ್ಷಗಳವರೆಗೆ ಮಳೆಯನ್ನೇ ನಂಬಿ ಬದುಕಿದ್ದ ರೈತರು, ಈಗ ನೀರಾವರಿ ಸೌಲಭ್ಯಗಳು ಬಂದಿರುವಾಗ ಈ ಕಂಪನಿಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.

ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಬಿ.ಜಿ. ಕುದರಿ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ರವಾನಿಸಲಾಯಿತು.

ಈ ಸಂದರ್ಭದಲ್ಲಿ ಭೂಮಿ ಖರೀದಿ ದರ ಹೆಚ್ಚಳ ಮಾಡಿ, ಒಣ ಭೂಮಿಗೆ 50 ಲಕ್ಷ ಹಾಗೂ ನೀರಾವರಿ ಭೂಮಿಗೆ 60 ಲಕ್ಷ ರೂ. ಪ್ರತಿ ಎಕರೆ ನಿಗದಿಪಡಿಸಬೇಕು. ಸರ್ಕಾರಿ ದರಕ್ಕಿಂತ ಕಡಿಮೆ ದರದಲ್ಲಿ ಖರೀದಿ ನಿಲ್ಲಿಸಬೇಕು. ಎಲ್ಲ ರೈತರಿಗೆ ಪ್ರತಿ ಟನ್‌ಗೆ 3,500 ರೂ. ನಿಗದಿಪಡಿಸಬೇಕು. ಕಬ್ಬು ತೂಕ ಮತ್ತು ಇಳುವರಿ ಪರೀಕ್ಷೆಯಲ್ಲಿ ಪಾರದರ್ಶಕತೆ ತರಬೇಕು. ಕಲಬುರಗಿ–ಯಾದಗಿರಿ ಜಿಲ್ಲೆಗಳ ತೊಗರಿಗೆ ಜಿಪಿ ಟ್ಯಾಗ್ (14/08/2019) ಅಡಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ 20,000 ರೂ. ಎಂಎಸ್‌ಪಿ ಘೋಷಿಸಬೇಕು. ಜನವರಿ–ಫೆಬ್ರುವರಿಯಲ್ಲಿ ಖರೀದಿ ಕೇಂದ್ರಗಳು ತೆರೆಯಬೇಕು. ಪವನ ಕಂಪನಿ ವಾಹನಗಳ ಪ್ರವೇಶವನ್ನು ನಿಷೇಧಿಸಬೇಕು. 15 ದಿನಗಳೊಳಗೆ ಬೇಡಿಕೆಗಳು ಈಡೇರದಿದ್ದರೆ ಕಂಪನಿಯ ವಾಹನಗಳ ಪ್ರವೇಶಕ್ಕೆ ತಕ್ಷಣ ನಿಷೇಧ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಕಬ್ಬಿಗೆ ಏಕರೂಪದ ಬೆಲೆ: “ತೊಗರಿ ಆರೋಗ್ಯ ರಕ್ಷಣೆಗೆ ಉಪಯುಕ್ತವಾಗಿದ್ದು, ವೈಜ್ಞಾನಿಕ ಸತ್ಯ. ಬೆಳಗಾವಿ, ಬಾಗಲಕೋಟೆ, ವಿಜಯಪುರದ ಕಬ್ಬಿಗೆ ಹೆಚ್ಚಿನ ಬೆಲೆ ನೀಡುವ ಸರ್ಕಾರ ನಮ್ಮ ತೊಗರಿಗೆ ಏಕೆ ಕಡಿಮೆ? ಇದು ರೈತರಿಗೆ ನ್ಯಾಯವೇ?” – ಖಜೂರಿ ಶ್ರೀಶೈಲ್ ಭೀಂಪೂರೆ

ಪ್ರತಿಭಟನೆಯಲ್ಲಿ ರೈತರು ಸುತ್ತಮುತ್ತ ಧರಣಿ ನಡೆಸಿ ಕಚೇರಿ ಮುಂದೆ ಕೂತು ಪ್ರತಿಭಟಿಸಿದರು. ಪೊಲೀಸ್ ವ್ಯವಸ್ಥೆಯಿದ್ದರೂ ಶಾಂತಿಯುತವಾಗಿ ಹೋರಾಟ ನಡೆಯಿತು.

ಹಿರೋಳಿ ಮಠದ ಶ್ರೀ ಶಿವಬಸವ ಸ್ವಾಮಿಗಳು, ಮಾಶಾಳ ಮಠದ ಮರುಳಾರಾಧ್ಯ ಶಿವಾಚಾರ್ಯರು, ಗುಳೆದಗುಡ್ಡ ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಸೋಮಲಿಂಗ ಕವಲಗಿ ಹಿರೋಳಿ, ಮಹಾದೇವ ಅಲಗೊಡ, ಸಂತೋಷಕುಮಾರ ಸುತಾರ, ಚನ್ನಪ್ಪ ಹತ್ತರಕಿ, ಈರಣ್ಣ ಬಿ. ಹತ್ತರಕಿ, ಉದಯಕುಮಾರ ಪಟ್ನೆ, ಮಹೇಶ ಮುನ್ನೊಳಿ, ಸತೀಶ ಖಜೂರಿ, ಮಹೇಶ ಕೊರಳಿ, ಶರಣಬಸಪ್ಪ ಹತ್ತರಕಿ, ಅಮೀತ ಪಾಟೀಲ, ಕಾಶಿನಾಥ ವಾಡೆದ ಹಿರೋಳಿ, ಮಲ್ಲಿಕಾರ್ಜುನ ಹಡಲಗಿ, ಬಸವರಾಜ ಅಂಬೇವಾಡ್, ತುಕಾರಾಮ ಹೊನ್ನೂರೆ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

Join WhatsApp

Join Now

ಶಿಫಾರಸಿತ ಸುದ್ದಿಗಳು

Leave a Comment

error: Content is Protected!