ಆಳಂದ: ದಕ್ಷ ಹಾಗೂ ಆದರ್ಶ ಆಳ್ವಿಕೆ ನೀಡಿದ ಮೈಸೂರು ಹುಲಿ ಟಿಪ್ಪು ಸುಲ್ತಾನರ ತತ್ವಗಳನ್ನು ಎಲ್ಲರೂ ಉಳಿಸಿ ಬೆಳೆಸೋಣ ಎಂದು ಪುರಸಭೆಯ ಮಾಜಿ ಸದಸ್ಯ ಸುನಿಲ ಹಿರೋಳಿಕರ್ ಹೇಳಿದರು.
ಪಟ್ಟಣದ ಮಟಕಿ ರಸ್ತೆಯಲ್ಲಿರುವ ಟಿಪ್ಪು ಸುಲ್ತಾನ್ ಚೌಕ್ನಲ್ಲಿ ಗುರುವಾರ, ಟಿಪ್ಪು ಸುಲ್ತಾನ್ ಚೌಕ್ ಸಮಿತಿಯಿಂದ ಆಯೋಜಿಸಲಾಗಿದ್ದ ಸುಲ್ತಾನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಇಂದು ಕೆಲವರು ಟಿಪ್ಪುವನ್ನು ವಿವಾದಕ್ಕೆ ಎಳೆಯಲು ಯತ್ನಿಸುತ್ತಿದ್ದಾರೆ. ಆದರೆ ಇತಿಹಾಸವನ್ನು ಮರೆಮಾಚುವುದು ಸಾಧ್ಯವಿಲ್ಲ. ಟಿಪ್ಪು ಧರ್ಮನಿರಪೇಕ್ಷತೆಯ ಪ್ರತೀಕ. ಶೃಂಗೇರಿ ಶಂಕರಾಚಾರ್ಯರಿಗೆ ರಕ್ಷಣೆ ನೀಡಿದವರೂ, ಹಿಂದೂ ದೇವಾಲಯಗಳಿಗೆ ದಾನ ಮಾಡಿದವರೂ ಟಿಪ್ಪು ಸುಲ್ತಾನನೇ. ಆದ್ದರಿಂದ ಟಿಪ್ಪುವನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಲು ಮಾಡುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ನಾವು ಎಲ್ಲರೂ ಒಗ್ಗೂಡಿ ಅವರ ಆದರ್ಶಗಳನ್ನು ಎತ್ತಿಹಿಡಿಯೋಣ” ಎಂದು ಹೇಳಿದರು.
ಮುಖಂಡ ತಯಬಲಿ ಶೇಖ್ ಮಾತನಾಡಿ—
“ಟಿಪ್ಪು ಸುಲ್ತಾನರು ಪ್ರೀತಿಯಿಂದ ಜನರಿಗಾಗಿ ರಾಜ್ಯ ನಡೆಸಿದ ರಾಜರು. ಜನರ ಮನಸ್ಸಿನಲ್ಲಿ ಇಂದಿಗೂ ಅವರ ಸ್ಥಾನ ಅಚಲವಾಗಿದೆ. ಇಂತಹ ಧೀರ ಹಾಗೂ ನ್ಯಾಯಪ್ರಿಯ ರಾಜನ ಜಯಂತಿಯನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯ. ಇಂದು ಶಾಲಾ ಮಕ್ಕಳಿಗೆ ಹಾಗೂ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಚುವ ಮೂಲಕ ಟಿಪ್ಪುವಿನ ಸೇವಾ ಪರಂಪರೆಯನ್ನು ನೆನಪಿಸಿಕೊಂಡಿದ್ದೇವೆ. ಟಿಪ್ಪು ಸಮಿತಿ ಪ್ರತಿ ವರ್ಷವೂ ಇದೇ ರೀತಿಯಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಎಲ್ಲಾ ಸಮುದಾಯಗಳ ಸಹಕಾರ ಇದಕ್ಕೆ ಸಿಕ್ಕಿದೆ. ಇದೇ ನಮ್ಮ ಆಳಂದದ ಸಾಮರಸ್ಯ” ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಟಿಪ್ಪು ಸುಲ್ತಾನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಸರ್ಕಾರಿ CPS ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್ ಚೌಕ್ ಸಮಿತಿ ಅಧ್ಯಕ್ಷ ಸೈಯದ್ ಜಾಕೀರ್, ಸಲೀಂ ಜಮಾದಾರ್, ಅಜಗರಅಲಿ ಹವಾಲ್ದಾರ್, ಮುಸ್ತಫಾ, ಮುಖಂಡ ಮಹಾದೇವ ಕಾಂಬಳೆ, ಮಲ್ಲಿಕಾರ್ಜುನ್ ಬೋಳಣಿ, ಮೊಹಮ್ಮದ್ ರಫೀಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.









