ಜಿಲ್ಲೆ ರಾಜ್ಯ ದೇಶ ವಿದೇಶ ಪ್ರಮುಖ ಸುದ್ದಿ ಎಐ (AI) ಶಿಕ್ಷಣ ಕೃಷಿ ಆರೋಗ್ಯ ಉದ್ಯೋಗ ಸಂಪಾದಕೀಯ ಜೀವನಶೈಲಿ ಕ್ರೀಡೆ ಮನರಂಜನೆ

---Advertisement---

ಆಳಂದದಲ್ಲಿ ಮಳೆಯಿಂದ ಬೆಳೆ ಹಾನಿ: ರೈತರಿಗೆ ಧೈರ್ಯ ತುಂಬಿದ ಕೃಷಿ ಸಚಿವರು, ಪರಿಹಾರದ ಭರವಸೆ.

On: September 30, 2025 8:14 PM

ಆಳಂದ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ವಲಯದಲ್ಲಿ ನಿರಂತರ ಮಳೆಯಿಂದ ಸಾವಿರಾರು ಎಕರೆ ಬೆಳೆಗಳು ನೀರಿನಲ್ಲಿ ಮುಳುಗಿ ಕೊಳೆತು ನಾಶವಾಗಿವೆ. ಹೆಸರು, ಉದ್ದು, ಸೋಯಾಬೀನ್, ತೊಗರಿ, ಕಬ್ಬು, ಬಾಳೆ ಹಾಗೂ ತೋಟಗಾರಿಕೆ ತರಕಾರಿ ಬೆಳೆಗಳು ಸಂಪೂರ್ಣ ಹಾನಿಗೊಂಡಿವೆ. ಫಲವತ್ತಾಗಿ ಬೆಳೆದಿದ್ದ ತೊಗರಿಯ ಬೇರುಗಳು ಕೊಳೆತು ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಮುಂದಿನ ಹಂಗಾಮಿಗೆ ಭೂಮಿ ಸಿದ್ಧಪಡಿಸುವುದಕ್ಕೂ ತೊಂದರೆ ಎದುರಾಗುತ್ತಿದೆ.

ಈ ಪರಿಸ್ಥಿತಿಯಲ್ಲಿ ರಾಜ್ಯ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಬುಧವಾರ ಆಳಂದ ತಾಲೂಕಿನ ಹಾನಿಗೊಂಡ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು. ರೈತರ ಸಂಕಷ್ಟವನ್ನು ಆಲಿಸಿದ ಅವರು ಸರ್ಕಾರ ತಕ್ಷಣದ ಪರಿಹಾರ ಒದಗಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದರು. “ರೈತರು ಧೈರ್ಯ ಕಳೆದುಕೊಳ್ಳಬಾರದು, ಸರ್ಕಾರ ಎಲ್ಲ ರೀತಿಯ ಸಹಾಯ ಮಾಡುತ್ತದೆ,” ಎಂದು ಹೇಳಿದರು.

ಸಚಿವರ ಭೇಟಿ ಸಂದರ್ಭದಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್. ಪಾಟೀಲ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಾಸಕರಾದ ಬಿ.ಆರ್. ಪಾಟೀಲ ಅವರು ಸಚಿವರಿಗೆ ಬೆಳೆ ಹಾನಿಯ ಗಂಭೀರತೆಯನ್ನು ವಿವರಿಸಿ, ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ. ರೈತರು ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವರಿಕೆ ಮಾಡಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ನೇತೃತ್ವದ ನಿಯೋಗವು ಸಚಿವರಿಗೆ ಮನವಿ ಸಲ್ಲಿಸಿ, ಬೆಳೆ ವಿಮೆ, ಸಾಲ ಮನ್ನಾ ಹಾಗೂ ಹಿಂಗಾರು ಹಂಗಾಮಿಗೆ 90ರಷ್ಟು ರಿಯಾಯಿತಿಯಲ್ಲಿ ಬೀಜ ವಿತರಣೆಯನ್ನು ಒದಗಿಸುವಂತೆ ಒತ್ತಾಯಿಸಿತು. ಕೇಂದ್ರದಿಂದಲೂ ಹೆಚ್ಚುವರಿ ಪರಿಹಾರವನ್ನು ಕೇಳಬೇಕೆಂದು ಹಾಗೂ ಇದನ್ನು ರಾಜ್ಯದ 6ನೇ ಗ್ಯಾರಂಟಿಯಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಸಚಿವ ಚೆಲುವರಾಯಸ್ವಾಮಿ ಅವರು ಕಡಗಂಚಿಯ ಜೊತೆಗೆ ಪಟ್ಟಣ ಹಾಗೂ ಸರಡಗಿ ಬಿ. ಭಾಗಗಳಲ್ಲಿಯೂ ಹಾನಿ ಪರಿಶೀಲಿಸಿ, ಅಧಿಕಾರಿಗಳಿಗೆ ವಿವರವಾದ ವರದಿ ಸಿದ್ಧಪಡಿಸುವಂತೆ ಸೂಚಿಸಿದರು. “ರೈತರ ಕಷ್ಟಕ್ಕೆ ತಕ್ಷಣ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅಗತ್ಯ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಹಮದ್ ಪಟೇಲ್, ಕಲಬುರಗಿ ಸಹಾಯಕ ನಿರ್ದೇಶಕ ಅರುಣಕುಮಾರ ಮೂಲಿಮನಿ ಮತ್ತು ಆಳಂದ ಸಹಾಯಕ ನಿರ್ದೇಶಕ ಬನಸಿದ್ಧ ಬಿರಾದಾರ ಬೆಳೆ ಹಾನಿಯ ತಾಂತ್ರಿಕ ವಿವರಗಳನ್ನು ಸಚಿವರಿಗೆ ಒದಗಿಸಿದರು.

ಈ ಭೇಟಿಯಿಂದ ರೈತರಲ್ಲಿ ಆಶಾಭಾವ ಮೂಡಿದರೂ ಪರಿಹಾರ, ಬೆಳೆ ವಿಮೆ ಮತ್ತು ಸಾಲ ಮನ್ನಾದಂತಹ ಕ್ರಮಗಳು ತ್ವರಿತವಾಗಿ ಜಾರಿಯಾಗದಿದ್ದರೆ ರೈತರ ಆರ್ಥಿಕ ಸಂಕಷ್ಟ ಗಂಭೀರವಾಗಬಹುದು ಎಂದು ಕೃಷಿಕ ಸಮಾಜ ಎಚ್ಚರಿಕೆ ನೀಡಿದೆ. “ರೈತರಿಗೆ ಈಗ ಸರ್ಕಾರದಿಂದ ತಕ್ಷಣದ ಬೆಂಬಲ ಬೇಕಾಗಿದೆ. ವಿಳಂಬವಾದರೆ ಮುಂದಿನ ಬಿತ್ತನೆಗೂ ತೊಂದರೆ ಉಂಟಾಗಬಹುದು,” ಎಂದು ಸಿದ್ರಾಮಪ್ಪ ಪಾಟೀಲ ಹೇಳಿದರು.

ಸರ್ಕಾರದಿಂದ ಘೋಷಿತ ಪರಿಹಾರ, ಬೆಳೆ ವಿಮೆಯ ವಿತರಣೆ ಹಾಗೂ ರಿಯಾಯಿತಿ ಬೀಜ ವಿತರಣೆ ಶೀಘ್ರವಾಗಿ ತಲುಪಿದರೆ ಮಾತ್ರ ರೈತರು ಈ ದುರಂತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

Join WhatsApp

Join Now

Leave a Comment

error: Content is Protected!