ಆಳಂದ: ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಾಂಗವಾಡದ ದರ್ಗಾ ಬೇಸ್ ಕೆಳಭಾಗದ ಬಡಾವಣೆಗಳು ನೀರಿನಲ್ಲಿ ಮುಳುಗಿ ಅನೇಕ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ ತಕ್ಷಣ ಪರಿಹಾರ ಒದಗಿಸಬೇಕೆಂದು ದಲಿತ ಸೇನೆ (ರಾಮವಿಲಾಸ್ ಪಾಸ್ವಾನ್ ಘಟಕ) ಕಾರ್ಯಕರ್ತರು ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರು ಪಟ್ಟಣದ ದರ್ಗಾ ಚೌಕದಲ್ಲಿ ಜಮಾಯಿಸಿ ಮುಖ್ಯಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದರು. “ಮಳೆಯಿಂದಾಗಿ ರಸ್ತೆಗಳು, ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳು ಪ್ರವಾಹದಂತ ಸ್ಥಿತಿಗೆ ತಲುಪಿವೆ. ಜನರ ಮನೆ ಸಾಮಗ್ರಿಗಳು ಹಾನಿಗೊಳಗಾಗಿವೆ. ಜೀವನ ಸಂಕಷ್ಟದಲ್ಲಿದೆ. ಕೂಡಲೇ ಡ್ರೈನೇಜ್ ವ್ಯವಸ್ಥೆಯನ್ನು ಸುಧಾರಿಸಿ, ಹಾನಿಗೊಳಗಾದ ಪ್ರತೀ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ಒದಗಿಸಬೇಕು,” ಎಂದು ಅವರು ಒತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿದ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ಸಮಸ್ಯೆ ಪರಿಹಾರಕ್ಕಾಗಿ ಸಂಬಂಧಿತ ಶಾಖೆಗೆ ಸೂಚನೆ ನೀಡಲಾಗುವುದೆಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ರಾಜು ಕಟ್ಟಿಮನಿ, ದಲಿತ ಸೇನೆ ಅಧ್ಯಕ್ಷ ಧರ್ಮಾ ಬಂಗರಗಾ, ಉಪಾಧ್ಯಕ್ಷ ದಿಲೀಪ ಕಾಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳಣಿ, ಜೈಭೀಮ ಕಂಟೇಕೂರೆ, ಮಲ್ಲಿಕಾರ್ಜುನ ಚಿಂಚೋಳಿ, ರೇವಣಸಿದ್ಧ ಮಂಡ್ಲೆ ಹಾಗೂ ಸೂರ್ಯಕಾಂತ ಸಾಗರ ಸೇರಿದಂತೆ ಹಲವರು ಹಾಜರಿದ್ದರು.
ಇತ್ತ ಮಳೆಯ ಹಾವಳಿ ಪಟ್ಟಣದಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ತೀವ್ರ ಪರಿಣಾಮ ಬೀರಿದೆ. ನಿರಂತರ ಮಳೆಯಿಂದ ರೈತರು ಬೆಳೆ ನಷ್ಟಕ್ಕೆ ಒಳಗಾಗಿದ್ದು, ಕೂಲಿ ಕಾರ್ಮಿಕರಿಗೂ ಕೆಲಸದ ಕೊರತೆ ಉಂಟಾಗಿದೆ. ವಿಶೇಷವಾಗಿ ಸರಸಂಬಾ ಹಾಗೂ ಮದನಹಿಪ್ಪರಗಾ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ತಹಸೀಲ್ದಾರ ಅಣ್ಣಾರಾವ್ ಪಾಟೀಲ ನೀಡಿದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 21 ಮತ್ತು 22ರಂದು ಆಳಂದ ವಲಯದಲ್ಲಿ ಭಾರೀ ಮಳೆಯಾಗಿದೆ. ಸರಸಂಬಾದಲ್ಲಿ ಒಟ್ಟು 123.2 ಮಿ.ಮೀ., ಮದನಹಿಪ್ಪರಗಾದಲ್ಲಿ 112.0 ಮಿ.ಮೀ. ಹಾಗೂ ಕೊರಳ್ಳಿಯಲ್ಲಿ 73.5 ಮಿ.ಮೀ. ಮಳೆಯಾಗಿದೆ. ಈ ಮಳೆಯ ಪರಿಣಾಮವಾಗಿ ತಾಲೂಕಿನ ಅನೇಕ ಕಡೆಗಳಲ್ಲಿ ಕೃಷಿ ಚಟುವಟಿಕೆಗಳು ಮತ್ತು ದಿನನಿತ್ಯ ಜೀವನ ಗಂಭೀರವಾಗಿ ಅಸ್ತವ್ಯಸ್ತಗೊಂಡಿವೆ.









