ಆಳಂದ: ಉತ್ತರಾಖಂಡದ ಉತ್ತರಕಾಶಿ ಬಳಿ ಇಂದು (05.08.2025) ಸಂಭವಿಸಿದ ಮೇಘಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹ ಮತ್ತು ಭೂಕುಸಿತದ ಭೀಕರ ದುರಂತದಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಹತ್ತಾರು ಜನರು ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಿಂದ ಉತ್ತರಾಖಂಡದ ಉತ್ತರಕಾಶಿಗೆ ಪ್ರವಾಸಕ್ಕೆ ತೆರಳಿದವರು ಈ ದುರಂತದಲ್ಲಿ ಸಿಲುಕಿರುವ ಸಾಧ್ಯತೆ ಇರುವ ಕಾರಣ, ಅಂತಹ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ, ಅವರ ಸಂಬಂಧಿಕರು ಅಥವಾ ಪರಿಚಿತರವರು ತಕ್ಷಣವೇ ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08472-278677 ಅಥವಾ ಪೋಲೀಸ್ ಕಂಟ್ರೋಲ್ ರೂಂ ನಂಬರ್ಗಳು: 9480805500, 9480803500, 08472-263604, 08472-228112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಹೆಚ್ಚಿನ ವಿವರಗಳನ್ನು ಅಳಂದ ತಹಸಿಲ್ದಾರ್ ಅಣ್ಣಾರಾವ್ ಪಾಟೀಲ್ ಅವರು ಸಾರ್ವಜನಿಕರಿಗೆ ಸ್ಪಷ್ಟಪಡಿಸಿದ್ದು, ಸಂತ್ರಸ್ತರಿಗೆ ತುರ್ತು ನೆರವು ಒದಗಿಸಲು ಜಿಲ್ಲಾಡಳಿತ ಸಂಪೂರ್ಣ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
“ಈ ದುರಂತದ ಬಗ್ಗೆ ಯಾವುದೇ ಮಾಹಿತಿ ಇರುವವರು ವಿಳಂಬ ಮಾಡದೆ ಮೇಲ್ಕಂಡ ಸಂಖ್ಯೆಗಳ ಮೂಲಕ ಸಂಪರ್ಕಿಸಿ ಸಹಕರಿಸಬೇಕು,” ಎಂದು ತಹಸಿಲ್ದಾರ್ ಪಾಟೀಲ್ ಅವರು ಮನವಿ ಮಾಡಿದರು.









